ಕಸಾಪ | ಕನ್ನಡ ಸಾಹಿತ್ಯ ಪರಿಷತ್ತು

ಕನ್ನಡ ಸಾಹಿತ್ಯ ಪರಿಷತ್ತಿನ ಆ್ಯಪ್ ಲೋಕಾರ್ಪಣೆ

05 Aug, 2022

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು ಹೊಸ ರೂಪ ಪಡೆಯುತ್ತಿದೆ. ಕನ್ನಡಿಗರ ಹೆಮ್ಮೆಯ ಕನ್ನಡ ಸಾಹಿತ್ಯ ಪರಿಷತ್ತಿನೊಂದಿಗೆ ಸರಕಾರ ಜೊತೆಯಾಗಿ ಕನ್ನಡ ಕಟ್ಟುವ ಕಾರ್ಯವನ್ನು ನಡೆಸಲಿದೆ. ಸಾಹಿತ್ಯದ ಒಡನಾಟ ಇಲ್ಲದವರಿಗೂ ಸಾಹಿತ್ಯದಲ್ಲಿ ಆಸಕ್ತಿ ಮೂಡಿಸುವ ಕಾರ್ಯ ಪರಿಷತ್ತು ಮಾಡಬೇಕಿದೆ ಎಂದು ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ ತಿಳಿಸಿದರು.

    ಅವರು ಇಂದು ಸಿಎಮ್ ಗೃಹ ಕಚೇರಿ 'ಕೃಷ್ಣಾ'ದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ  ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿದ ಮೊಬೈಲ್ ಅಪ್ಲಿಕೇಷನ್ ಅನ್ನು ಲೋಕಾರ್ಪಣೆ ಮಾಡಿ ಮಾತನಾಡಿದರು.  ನಾಡೋಜ ಡಾ. ಮಹೇಶ ಜೋಶಿ ಅವರ ನೇತ್ರತ್ವದಲ್ಲಿ ಪರಿಷತ್ತು ಸಾಕಷ್ಟು ಬದಲಾವಣೆಗಳನ್ನು ಕಾಣುತ್ತಿದೆ. ಅದಕ್ಕೆ ಕಾರಣ ಅವರ ಕ್ರೀಯಾಶೀಲತೆ ಹಾಗೂ ಕನ್ನಡ ಕಟ್ಟಿಬೆಳೆಸುವ ಛಲವೇ ಕಾರಣ. ಪ್ರಸ್ತುತ ಕನ್ನಡಿಗರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಮೇಲೆ ಅಪಾರವಾದ ನಿರೀಕ್ಷೆಯಿದೆ. ಆ ಎಲ್ಲಾ ನಿರೀಕ್ಷೆಗಳನ್ನು ಮಹೇಶ ಜೋಶಿ ಅವರ ಮಾರ್ಗದರ್ಶನದಲ್ಲಿ ಅವರ ನೇತೃತ್ವದ ತಂಡ ಕೆಲಸಮಾಡಲಿದೆ ಎನ್ನುವ ವಿಶ್ವಾಸ ಸರಕಾರಕ್ಕೆ ಇದೆ.

     ಕನ್ನಡ ಭಾಷೆಗೆ ದೇಶದಲ್ಲಿ ಅಗ್ರಸ್ಥಾನವಿದೆ, ಅದಕ್ಕೆ ತಕ್ಕಂತೆ ಆಯಾ ಕಾಲಘಟ್ಟದಲ್ಲಿ ಸವಾಲುಗಳು ಬಂದೇ ಬರುತ್ತವೆ. ಕನ್ನಡ ಉಳಿಸಿ ಎಲ್ಲ ರಂಗದಲ್ಲಿ ಬೆಳೆಸುವುದಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನೊಂದಿಗೆ ಸರಕಾರವೂ ಜೊತೆಯಾಗಿ ಮುನ್ನಡೆಯಲಿದೆ. ಮುಂದಿನ ದಿನಗಳಲ್ಲಿ ಉತ್ತಮ ಸಾಹಿತ್ಯ ಕೃತಿಗಳು ಪ್ರಕಟವಾಗಬೇಕಿದೆ. ಎಲ್ಲಾ ಕಾಲದಲ್ಲಿ ನೆನಪಿಸಿಕೊಳ್ಳುವಂತಹ ಸಮಾಮುಖಿ ಸಾಹಿತ್ಯ ರಚನೆಯಾಗಬೇಕಿದೆ. ಸ್ಫೂರ್ತಿದಾಯಕ ಕಾದಂಬರಿಗಳು ೮೦ರ ದಶಕದ ನಂತರ ಅಷ್ಟಾಗಿ ಪ್ರಕಟವಾಗಿಲ್ಲ. ಕನ್ನಡ ಸಾಹಿತ್ಯದ ಪ್ರಕಾರಗಳು ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗುವ ಮಟ್ಟದಲ್ಲಿ ಬೆಳೆಯಬೇಕಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯ ಪಟ್ಟರು.

     ಸಾಹಿತ್ಯ ಪರಿಷತ್ತಿನೊಂದಿಗೆ ಯಾವುದೇ ಪ್ರತಿಷ್ಟೆ ಇಲ್ಲದೆ ಕನ್ನಡ ಕಟ್ಟುವಲ್ಲಿ ರಾಜ್ಯ ಸರಕಾರ ಜೊತೆಯಾಗಿ ಇರಲಿದೆ. ಹಾವೇರಿಯಲ್ಲಿ ಹಮ್ಮಿಕೊಂಡ ೮೬ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನ ಭೂತೋ ನ ಭವಿಶ್ಯತಿ ಎನ್ನುವಂತೆ ನಡೆಸಲಾಗುವುದು. ಅದೇ ಕಾರಣಕ್ಕೆ ಇದೇ ಮೋದಲ ಬಾರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಿಗೆ ರಾಜ್ಯ ಸಚಿವ ಸ್ಥಾನ ಮಾನ ನೀಡಿ ಸರಕಾರ ಗೌರವಿಸಿದೆ ಎಂದು ಮುಖ್ಯಮಂತ್ರಿಗಳು ಹೇಳಿದರು.

     ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಮಾತನಾಡಿ  "ಕನ್ನಡ ಸಾಹಿತ್ಯ ಪರಿಷತ್ತನ್ನು ಜನಸಾಮಾನ್ಯರ ಪರಿಷತ್ತನ್ನಾಗಿಸುವ" ನಿಟ್ಟಿನಲ್ಲಿ ಪರಿಷತ್ತನ್ನು ಮುನ್ನಡೆಸಲಾಗುತ್ತಿದೆ. ಕನ್ನಡ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿ ಮತ್ತು ಜಾನಪದ ಇವುಗಳ ರಕ್ಷಣೆ, ಪ್ರಸಾರ ಮತ್ತು ಅಭಿವೃದ್ಧಿಯ ಮೂಲ ಧ್ಯೇಯೋದ್ದೇಶಗಳೊಂದಿಗೆ ಕನ್ನಡ-ಕನ್ನಡಿಗ-ಕರ್ನಾಟಕದ ಹಿತರಕ್ಷಣೆ ಕಾಪಾಡುವ ಹಾಗೂ ಅಭಿವೃದ್ಧಿ ಪಡಿಸುವ ಜವಾಬ್ದಾರಿಯನ್ನು ಹೊತ್ತು, ಪರಿಷತ್ತಿನ ನಿಯಮ-ನಿಬಂಧನೆಗಳಿಗೆ ಆಮೂಲಾಗ್ರ ಬದಲಾವಣೆ ತರುವ ಮೂಲಕ ಕ್ರಾಂತಿಕಾರಿ ಹೆಜ್ಜೆಯನ್ನು ಇರಿಸಲಾಗಿದೆ.

    ವಿಶ್ವದ್ಯಾಂತ ಕನ್ನಡವನ್ನು ಒಗ್ಗೂಡಿಸಲು ಹೊರರಾಜ್ಯ, ಕೇಂದ್ರಾಡಳಿತ ಪ್ರದೇಶ ಮತ್ತು ಹೊರದೇಶ ಘಟಕಗಳನ್ನು ಸ್ಥಾಪಿಸುವ ದೃಷ್ಟಿಯಿಂದಲೂ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾದ ಪರಿಷತ್ತಿಗೆ ಪ್ರಸ್ತುತ ಮುಂದಿನ ಐದು ವರ್ಷಗಳ ಈ ಅವಧಿಯಲ್ಲಿ ಒಂದು ಕೋಟಿ ಸದಸ್ಯತ್ವವನ್ನು ಹೊಂದುವ ದೃಷ್ಟಿಯಿಂದ ಶ್ರೀಸಾಮಾನ್ಯನೂ ಸಹ ಸದಸ್ಯತ್ವ ಪಡೆಯಲು ಅನುಕೂಲವಾಗುವಂತೆ ರೂ.೫೦೦-೦೦ ಗಳಿದ್ದ ಸದಸ್ಯತ್ವ ಶುಲ್ಕವನ್ನು ರೂ. ೨೫೦-೦೦ ಗಳಿಗೆ ಇಳಿಸಲಾಗಿದೆ .. ಇನ್ನು ಮುಂದೆ https://play.google.com/store/apps/details?id=com.knobly.kasapa ವಿಳಾಸದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಪ್ಲಿಕೇಷನ್ ಸಾರ್ವಜನಿಕರಿಗೆ ಸಿಗಲಿದೆ ಎಂದರು.

  ಈ ಸಂದರ್ಭದಲ್ಲಿ ಸಚಿವರಾದ ಡಾ. ಸಿ. ಎನ್. ಅಶ್ವತ್ಥ ನಾರಾಯಣ, ವಿ.ಸೋಮಣ್ಣ, ಶಾಸಕರಾದ ನೆಹರೂ ಓಲೆಕಾರ,  ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ಕಾರ್ಯದರ್ಶಿಗಳಾದ ಎಂ. ಎಸ್. ಶ್ರೀಕರ್, ಜಯರಾಮ ಮತ್ತು ಪರಿಷತ್ತಿನ  ಗೌರವ ಕೋಶಾಧ್ಯಕ್ಷರಾದ ಶ್ರೀ ಬಿ.ಎಂ. ಪಟೇಲ್ ಪಾಂಡು, ಗೌರವ ಕಾರ್ಯದರ್ಶಿ ಶ್ರೀ ನೇ.ಭ. ರಾಮಲಿಂಗಶೆಟ್ಟಿ ಹಾಗೂ ಪರಿಷತ್ತಿನ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಭಾವಚಿತ್ರ: ಸಿಎಮ್ ಗ್ರಹಕಚೇರಿ ಕೃಷ್ಣಾದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ  ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿದ ಮೊಬೈಲ್ ಅಪ್ಲಿಕೇಷನ್ನನ್ನು ಮಾನ್ಯ ಮುಖ್ಯಮಂತ್ರ ಶ್ರೀ ಬಸವರಾಜ ಬೊಮ್ಮಾಯಿ ಲೋಕಾರ್ಪಣೆ ಮಾಡಿ ಮಾತನಾಡಿದರು

Publisher: ಕಸಾಪ | ಕನ್ನಡ ಸಾಹಿತ್ಯ ಪರಿಷತ್ತು

Comments0 Comments

Be the first one to comment..

Login to Give your comment
Powered by